Monday, December 9, 2019

ಎಷ್ಟು ಸಾಹಸವಂತ ನೀನೇ ಬಲವಂತ Estu Saahasavanta neene balavanta

ಶ್ರೀ ವಾದಿರಾಜರ ಕೃತಿ 

 ಸುಂದರಕಾಂಡ ಸಂಗ್ರಹ 

 ರಾಗ ನವರೋಜ್             ಆದಿತಾಳ

ಎಷ್ಟು ಸಾಹಸವಂತ ನೀನೇ ಬಲವಂತ
ದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ
ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ ॥

ರಾಮರಪ್ಪಣೆಯಿಂದ ಶರಧಿಯ ದಾಟಿ
ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ
ಈ ಮಹಿಯೊಳು ನಿನಗಾರೈ ಸಾಟಿ ॥ 1 ॥

ದೂರದಿಂದಸುರನ ಪುರವನ್ನು ನೋಡಿ
ಭರದಿ ಶ್ರೀರಾಮರ ಸ್ಮರಣೆಯ ಮಾಡಿ
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು
ವಾರಿಜಮುಖಿಯನು ಕಂಡು ಮಾತಾಡಿ ॥ 2 ॥

ರಾಮರ ಕ್ಷೇಮವ ರಮಣಿಗೆ ಪೇಳಿ
ತಾಮಸ ಮಾಡದೆ ಮುದ್ರಿಕೆ ನೀಡಿ
ಪ್ರೇಮದಿ ಜಾನಕಿ ಕುರುಹನು ಕೊಡಲಾಗ
ಆ ಮಹಾವನದೊಳು ಫಲವನು ಬೇಡಿ ॥ 3 ॥

ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
ಬಣ್ಣಿಸಿ ಅಸುರರ ಬಲವನು ಮುರಿದು ॥ 4 ॥

ಶೃಂಗಾರ ವನದೊಳಗಿದ್ದ ರಾಕ್ಷಸರ
ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಕುವರನ
ಭಂಗಿಸಿ ಬಿಸುಟೆಯೋ ಬಂದ ರಕ್ಕಸರ ॥ 5 ॥

ದೂರು ಪೇಳಿದರೆಲ್ಲಾ ರಾವಣನೊಡನೆ
ಚೀರುತ್ತ ಕರೆಸಿದ ಇಂದ್ರಜಿತುವನೆ
ಚೋರಕಪಿಯ ನೀ ಹಿಡಿತಹುದೆನ್ನುತ
ಶೂರರ ಕಳುಹಿದ ನಿಜಸುತನೊಡನೆ ॥ 6 ॥

ಪಿಡಿದನು ಇಂದ್ರಜಿತು ಕಡು ಕೋಪದಿಂದ
ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
ನಡೆದನು ಲಂಕೆಯ ಒಡೆಯನಿದ್ದೆಡೆಗೆ ॥ 7 ॥

ಕಂಡ ರಾವಣನು ಉದ್ದಂಡಕಪಿಯನು
ಮಂಡೆಯ ತೂಗುತ ಮಾತಾಡಿಸಿದನು
ಭಂಡು ಮಾಡದೆ ಬಿಡೆ ನೋಡು ಕಪಿಯನೆ
ಗಂಡುಗಲಿಯು ದುರುದುರಿಸಿ ನೋಡಿದನು ॥ 8 ॥

ಛಲವ್ಯಾಕೋ ನಿನಗಿಷ್ಟು ಎಲೆ ಕೊಡಗನೆ
ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನ್ನು
ಬಲವಂತ ರಾಮರ ಬಂಟ ಬಂದಿಹೆನೋ
ಹಲವು ಮಾತ್ಯಾಕೋ ಹನುಮನು ನಾನೇ ॥ 9 ॥

ಬಡ ರಾವಣನೆ ನಿನ್ನ ಬಡಿದು ಹಾಕುವೆನೋ
ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ
ಹುಡಿಯೇಳಿಸುವೆನೋ ಖುಲ್ಲ ರಕ್ಕಸನೆ
ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ 10 ॥

ನಿನ್ನಂಥ ದೂತರು ರಾಮನ ಬಳಿಯೊಳು
ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ
ನನ್ನಂಥ ದೂತರು ನಿನ್ನಂಥ ಪ್ರೇತರು
ಇನ್ನೂರು ಮುನ್ನೂರು ಕೋಟಿ ಕೇಳರಿಯಾ ॥ 11 ॥

ಕಡು ಕೋಪದಿಂದಲಿ ಖೂಳ ರಾವಣನು
ಸುಡಿರೆಂದ ಬಾಲವ ಸುತ್ತಿ ವಸನವನು
ಒಡೆಯನ ಮಾತಿಗೆ ತಡೆಬಡೆ ಇಲ್ಲದೆ
ಒಡನೆ ಮುತ್ತಿದರು ಗಡಿಮನೆಯವರು ॥ 12 ॥

ತಂದರು ವಸನವ ತಂಡತಂಡದಲಿ
ಒಂದೊಂದು ಮೂಟೆ ಎಂಭತ್ತು ಕೋಟಿಯಲಿ
ಚಂದದಿ ಹರಳಿನ ತೈಲದೊಳದ್ದಿಸಿ
ನಿಂದ ಹನುಮನು ಬಾಲವ ಬೆಳೆಸುತ ॥ 13 ॥

ಶಾಲು ಸಕಲಾತಿಯು ಸಾಲದೆಯಿರಲು
ಬಾಲೇರ ವಸ್ತ್ರವ ಸೆಳೆದು ತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
ಕಾಲಮೃತ್ಯುವ ಕೆಣಕಿದರಲ್ಲಿ ॥ 14 ॥

ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
ಇಣಿಕಿನೋಡುತ ಅಸುರರನಣಕಿಸುತ
ಝಣಝಣಝಣರೆನೆ ಬಾಲದ ಗಂಟೆಯು
ಮನದಿ ಶ್ರೀ ರಾಮರ ಪಾದವ ನೆನೆಯುತ ॥ 15 ॥

ಮಂಗಳಂ ಶ್ರೀರಾಮಚಂದ್ರಮೂರುತಿಗೆ
ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯಸುಟ್ಟು
ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ 16 ॥

ಹತ್ತಿತು ಅಸುರನ ಗಡ್ಡ ಮೀಸೆಗಳು
ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿ ರಾಮರು ಕೋಪಿಸುವರು ಎಂದು
ಚಿತ್ರದಿ ನಡೆದನು ಅರಸನಿದ್ದೆಡೆಗೆ ॥ 17 ॥

ಸೀತೆಯ ಕ್ಷೇಮವ ರಾಮರಿಗ್ಹೇಳಿ
ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
ಸೇತುವೆ ಕಟ್ಟಿ ಚದುರಂಗ ಬಲಸಹ
ಮುತ್ತಿತು ಲಂಕೆಯ ಸೂರೆಗೈಯುತಲಿ ॥ 18 ॥

ವೆಗ್ಗಳವಾಯಿತು ರಾಮರ ದಂಡು
ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ
ಝಗ್ಗನೆ ಪೇಳ್ದರು ರಾವಣಗಂದು ॥ 19 ॥

ರಾವಣ ಮೊದಲಾದ ರಾಕ್ಷಸರ ಕೊಂದು
ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡಯೋಧ್ಯದಿ
ದೇವ ಶ್ರೀರಾಮರು ರಾಜ್ಯವಾಳಿದರು ॥ 20 ॥

ಶಂಖದೈತ್ಯನ ಕೊಂದೆ ಶರಣು ಶರಣಯ್ಯ
ಶಂಖಗಿರಿಯಲಿ ನಿಂದೆ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ
ಬಿಂಕದಿ ಪಡೆದೆಯೋ ಅಜನಪದವಿಯ ॥ 21 ॥

No comments:

Post a Comment